ಯಕ್ಷಗಾನ ಕವಿ ಚರಿತ್ರೆ : ಒಂದು ಮಹತ್ವಾಕಾಂಕ್ಷೆಯ ಪುಸ್ತಕ
ಲೇಖಕರು : ಮುರಳೀಧರ ಉಪಾಧ್ಯ ಹಿರಿಯಡಕ
ಶುಕ್ರವಾರ, ಜನವರಿ 17 , 2014
|
ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ‘ಯಕ್ಷಗಾನ ಕವಿ ಚರಿತ್ರೆ’ ಒಂದು ಮಹತ್ವಾಕಾಂಕ್ಷೆಯ ಪುಸ್ತಕ. ಕುಂಬಳೆಯಿಂದ ಬೀದರ್ವರೆಗಿನ ಸುಮಾರು ೧೨೦೦ ಯಕ್ಷಗಾನ ಕವಿಗಳು ಇಲ್ಲಿ ಉಲ್ಲೇಖಗೊಂಡಿದ್ದಾರೆ. ಇವರಲ್ಲಿ 300 ಮಂದಿ ಅಜ್ಞಾತ ಕವಿಗಳು. ಈ ಕವಿಗಳು ರಚಿಸಿದ ಪ್ರಸಂಗಗಳ ಸಂಖ್ಯೆ ಸುಮಾರು 4600. ‘ಪ್ರತಿಯೊಂದು ಪ್ರಸಂಗದಲ್ಲಿ ೨೫೦ ಪದ್ಯಗಳಿವೆ ಎಂದು ಭಾವಿಸಿದರೂ, ಪದ್ಯಗಳ ಒಟ್ಟು ಸಂಖ್ಯೆ ಹತ್ತು ಲಕ್ಷ ದಾಟುತ್ತದೆ’.
|
ಲೇಖಕರು : ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
ಪ್ರಕಾಶಕರು : ಯಕ್ಷಗಾನ ಕೇಂದ್ರ, ಎಂ.ಜಿ.ಎಂ ಕಾಲೇಜು, ಉಡುಪಿ-– 576102
ಯಕ್ಷಗಾನ ಕವಿ, ಪ್ರಸಂಗಗಳ ದಾಖಲೆ
|
ಪಡುವಲಪಾಯ, ದೊಡ್ಡಾಟ, ಸಣ್ಣಾಟ, ಪಾರಿಜಾತ- ಈ ಪ್ರಕಾರಗಳ ಕವಿಗಳನ್ನೂ ಇಲ್ಲಿ ಯಕ್ಷಗಾನ ಕವಿಗಳೆಂದೇ ಪರಿಗಣಿಸಲಾಗಿದೆ. ಲೇಖಕರು ಕೆಲವು ಮುಖ್ಯ ಪ್ರಸಂಗಗಳ ಒಂದೆರಡು ಪದ್ಯಗಳನ್ನೂ ಉದಾಹರಣೆಗಾಗಿ ನೀಡಿದ್ದಾರೆ. ಕ್ರಿ.ಶ. 1300–50ರ ಸುಮಾರಿಗೆ ಅಜ್ಞಾತ ಕವಿಯೊಬ್ಬ ಬರೆದ ‘ಆದಿ ಪರ್ವ’ವನ್ನು ಯಕ್ಷಗಾನದ ಪ್ರಾಚೀನ ಕೃತಿ ಎಂದು ಕಬ್ಬಿನಾಲೆಯವರು ಒಪ್ಪಿಕೊಂಡಿದ್ದಾರೆ. ಈ ಕುರಿತು ಡಾ. ಪ್ರಭಾಕರ ಜೋಶಿಯವರ ಭಿನ್ನಾಭಿಪ್ರಾಯವನ್ನು ಇಲ್ಲಿ ಅವರು ದಾಖಲಿಸಬೇಕಿತ್ತು. ಹಿಂದೂ, ಜೈನ, ಮುಸ್ಲಿಂ- ಹೀಗೆ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಕವಿಗಳು ಇಲ್ಲಿದ್ದಾರೆ. ಕಿಬ್ಬಚ್ಚಲ ಮಂಜಮ್ಮ, ಗಣಪಕ್ಕ ಸಣ್ಣಬಡ್ತಿ, ಮಹಾಲಕ್ಷ್ಮಿ ನಾಗಪ್ಪ ಜೋಯಿಸ ಇಂಥ ಕವಯಿತ್ರಿಯರೂ ಕಾಣಿಸುತ್ತಾರೆ.
ಹೊಸ್ತೋಟ ಮಂಜುನಾಥ ಭಾಗವತರು ಅತ್ಯಂತ ಹೆಚ್ಚಿನ ಪ್ರಸಂಗಗಳನ್ನು (215) ರಚಿಸಿದ ಕವಿ. ಅನಂತರಾಮ ಬಂಗಾಡಿಯವರು ನೂರಕ್ಕಿಂತ ಹೆಚ್ಚು ತುಳು ಪ್ರಸಂಗಗಳನ್ನು ಬರೆದಿದ್ದಾರೆ. ಸದಾಶಿವ ಭಟ್ ಒಂಬತ್ತು ಭಾಷೆಗಳಲ್ಲಿ ಪ್ರಸಂಗಗಳನ್ನು ಬರೆದಿರುವ ಕವಿ. ಯಕ್ಷಗಾನ ಕವಿಗಳು ಪುರಾಣಲೋಕದ ಗಡಿದಾಟಿ, ‘ಇಸ್ಪೀಟಾಟ’ ‘ಭಗವಾನ್ ಯೇಸು ಕ್ರಿಸ್ತ’, ‘ಸತ್ಯ ವಿಜಯ’, ‘ನಸ್ಸೇರ್ ವಿಜಯ’ ಅಫಜಲಖಾನ್ ವಧೆ’ ಇಂಥ ವಸ್ತುಗಳನ್ನು ಆಯ್ಕೆ ಮಾಡಿದ್ದಾರೆ. ಮುದ್ದಣನ ಹಾಗೆ ಕನ್ನಡ ಲೇಖಕರಾದ ಪಂಜೆ, ಮುಳಿಯ, ಪುತಿನ ಕೂಡ ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ.
ಪ್ರಸಂಗಗಳು ಪ್ರಕಟಿತವೇ, ಅಪ್ರಕಟಿತವೇ ಎಂದು ತಿಳಿಸದಿರುವುದು, ಪ್ರಕಟಣೆಯ ಮಾಹಿತಿ ನೀಡದಿರುವುದು ಈ ಗ್ರಂಥದ ಒಂದು ದೊಡ್ಡ ಕೊರತೆ. ನನ್ನ ಗುರುಗಳಾಗಿದ್ದ ಸೀತಾನದಿ ಗಣಪಯ್ಯ ಶೆಟ್ಟರು ‘ನಾವು ಯಕ್ಷಗಾನ ಪ್ರಸಂಗ ಬರೆದವರು ಕವಿಗಳಲ್ಲವೇ’ ಎಂದು ಪ್ರಶ್ನಿಸುತ್ತಿದ್ದರು. ಯಕ್ಷಗಾನ ‘ಕವಿಗಳ ಸಂದಣಿಗೆ ಬಲವಂದು’ ಅವರಿಗೆ ಸಾಹಿತ್ಯ ಚರಿತ್ರೆಯಲ್ಲಿ ಮನ್ನಣೆ ನೀಡಿರುವ ಡಾ. ಕಬ್ಬಿನಾಲೆಯವರು ಅಭಿನಂದನಾರ್ಹರು.
ಕೃಪೆ : http://prajavani.net
|
|
|